ಸರ್ ರಾಮಕೃಷ್ಣ ಗೋಪಾಲ್ ಭಂಡಾರ್ಕರ್( ೬ ಜುಲೈ ೧೮೩೭ – ೨೪ ಆಗಸ್ಟ್ ೧೯೨೫ ) ಒಬ್ಬ ಭಾರತೀಯ ವಿದ್ವಾಂಸ, ಓರಿಯಂಟಲಿಸ್ಟ್ ಮತ್ತು ಸಮಾಜ ಸುಧಾರಕ . == ಆರಂಭಿಕ ಜೀವನ == ರಾಮಕೃಷ್ಣ ಭಂಡಾರ್ಕರ್ ಅವರು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವಾನ್‌ನಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ರತ್ನಗಿರಿಯಲ್ಲಿ ಆರಂಭಿಕ ಶಾಲಾ ಶಿಕ್ಷಣದ ನಂತರ, ಅವರು ಬಾಂಬೆಯ ಎಲ್ಫಿನ್‌ಸ್ಟೋನ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಮಹಾದೇವ್ ಗೋವಿಂದ್ ರಾನಡೆ ಅವರೊಂದಿಗೆ, ೧೮೬೨ ರಲ್ಲಿ ಬಾಂಬೆ ವಿಶ್ವವಿದ್ಯಾಲಯದಿಂದ ಮೊದಲ ಪದವೀಧರರಲ್ಲಿ ಭಂಡಾರ್ಕರ್ ಕೂಡ ಒಬ್ಬರು. ಅವರು ಮುಂದಿನ ವರ್ಷ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದರು ಮತ್ತು ೧೮೮೫ ರಲ್ಲಿ ಗೊಟ್ಟಿಂಗನ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು. == ವೃತ್ತಿ == ರಾಮಕೃಷ್ಣ ಭಂಡಾರ್ಕರ್ ಅವರು ತಮ್ಮ ವಿಶಿಷ್ಟ ಬೋಧನಾ ವೃತ್ತಿಯಲ್ಲಿ ಎಲ್ಫಿನ್‌ಸ್ಟೋನ್ ಕಾಲೇಜು ( ಮುಂಬೈ ) ಮತ್ತು ಡೆಕ್ಕನ್ ಕಾಲೇಜ್ ( ಪುಣೆ ) ಗಳಲ್ಲಿ ಕಲಿಸಿದರು. ಅವರು ತಮ್ಮ ಜೀವನದುದ್ದಕ್ಕೂ ಸಂಶೋಧನೆ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ಅವರು ೧೮೯೪ ರಲ್ಲಿ ಬಾಂಬೆ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನಿವೃತ್ತರಾದರು. ಅವರು ಲಂಡನ್ ( ೧೬೭೪) ಮತ್ತು ವಿಯೆನ್ನಾ ( ೧೮೮೬) ದಲ್ಲಿ ನಡೆದ ಓರಿಯೆಂಟಲ್ ಸ್ಟಡೀಸ್ ಕುರಿತು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ಅಮೂಲ್ಯ ಕೊಡುಗೆಗಳನ್ನು ನೀಡಿದರು. ಇತಿಹಾಸಕಾರ ಆರ್‌ಎಸ್ ಶರ್ಮಾ ಅವರು ಇವರ ಬಗ್ಗೆ ಹೀಗೆ ಬರೆದಿದ್ದಾರೆ: ಅವರು ಡೆಕ್ಕನ್‌ನ ಶಾತವಾಹನರ ರಾಜಕೀಯ ಇತಿಹಾಸ ಮತ್ತು ವೈಷ್ಣವ ಮತ್ತು ಇತರ ಪಂಥಗಳ ಇತಿಹಾಸವನ್ನು ಪುನರ್ನಿರ್ಮಿಸಿದರು. ಒಬ್ಬ ಮಹಾನ್ ಸಮಾಜ ಸುಧಾರಕ, ತನ್ನ ಸಂಶೋಧನೆಗಳ ಮೂಲಕ ವಿಧವಾ ವಿವಾಹಗಳನ್ನು ಪ್ರತಿಪಾದಿಸಿದರು ಮತ್ತು ಜಾತಿ ವ್ಯವಸ್ಥೆ ಮತ್ತು ಬಾಲ್ಯವಿವಾಹದ ದುಷ್ಪರಿಣಾಮಗಳನ್ನು ಖಂಡಿಸಿದರು. ಶಿಕ್ಷಣತಜ್ಞರಾಗಿ, ಅವರು ೧೯೦೩ ರಲ್ಲಿ ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್‌ಗೆ ಅಧಿಕೃತವಲ್ಲದ ಸದಸ್ಯರಾಗಿ ಆಯ್ಕೆಯಾದರು. ಗೋಪಾಲ ಕೃಷ್ಣ ಗೋಖಲೆ ಅವರು ಪರಿಷತ್ತಿನ ಮತ್ತೊಬ್ಬ ಸದಸ್ಯರಾಗಿದ್ದರು. ೧೯೧೧ ರಲ್ಲಿ ಭಾರತದ ಬ್ರಿಟಿಷ್ ವಸಾಹತುಶಾಹಿ ಸರ್ಕಾರವು ಭಂಡಾರ್ಕರ್ ಅವರಿಗೆ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್ ಎಂಬ ಬಿರುದನ್ನು ನೀಡಿತು. == ಸಮಾಜ ಸುಧಾರಕ == ೧೮೫೩ ರಲ್ಲಿ, ಭಂಡಾರ್ಕರ್ ವಿದ್ಯಾರ್ಥಿಯಾಗಿದ್ದಾಗ, ಸಮಕಾಲೀನ ಸಮಾಜದ ಪ್ರಬಲ ಮತ್ತು ಸಾಂಪ್ರದಾಯಿಕ ಅಂಶಗಳ ಕೋಪವನ್ನು ತಪ್ಪಿಸಲು ರಹಸ್ಯವಾಗಿದ್ದ ಉದಾರವಾದಿ ವಿಚಾರಗಳನ್ನು ಮುಂದುವರಿಸುವ ಸಂಘವಾದ ಪರಮಹಂಸ ಸಭೆಯ ಸದಸ್ಯರಾದರು. ೧೮೬೪ ರಲ್ಲಿ ಕೇಶುಬ್ ಚಂದ್ರ ಸೇನ್ ಅವರ ಭೇಟಿ ಸಭಾ ಸದಸ್ಯರಿಗೆ ಸ್ಫೂರ್ತಿ ನೀಡಿತು. === ಪ್ರಾರ್ಥನಾ ಸಮಾಜ === ೧೮೬೬ ರಲ್ಲಿ, ಕೆಲವು ಸದಸ್ಯರು ಆತ್ಮರಾಮ್ ಪಾಂಡುರಂಗರ ಮನೆಯಲ್ಲಿ ಸಭೆಯನ್ನು ನಡೆಸಿದರು ಮತ್ತು ಕೆಲವು ಸುಧಾರಣೆಗಳಿಗೆ ಸಾರ್ವಜನಿಕವಾಗಿ ಪ್ರತಿಜ್ಞೆ ಮಾಡಿದರು, ಅವುಗಳೆಂದರೆ: ಜಾತಿ ವ್ಯವಸ್ಥೆಯ ಖಂಡನೆ ವಿಧವಾ ಪುನರ್ವಿವಾಹಕ್ಕೆ ಪ್ರೋತ್ಸಾಹ ಸ್ತ್ರೀ ಶಿಕ್ಷಣಕ್ಕೆ ಪ್ರೋತ್ಸಾಹ ಬಾಲ್ಯ ವಿವಾಹ ನಿರ್ಮೂಲನೆ ಸಾಮಾಜಿಕ ಸುಧಾರಣೆಗಳಿಗೆ ಆಧಾರವಾಗಿ ಧಾರ್ಮಿಕ ಸುಧಾರಣೆಗಳು ಅಗತ್ಯವೆಂದು ಸದಸ್ಯರು ತೀರ್ಮಾನಿಸಿದರು. ಅವರು ತಮ್ಮ ಮೊದಲ ಪ್ರಾರ್ಥನಾ ಸಭೆಯನ್ನು ೩೧ ಮಾರ್ಚ್ ೧೮೬೭ ರಂದು ನಡೆಸಿದರು, ಇದು ಅಂತಿಮವಾಗಿ ಪ್ರಾರ್ಥನಾ ಸಮಾಜದ ರಚನೆಗೆ ಕಾರಣವಾಯಿತು. ಕೇಶುಬ್ ಚುಂದರ್ ಸೇನ್ ಅವರ ಮತ್ತೊಂದು ಭೇಟಿ ಮತ್ತು ಪಂಜಾಬ್ ಬ್ರಹ್ಮ ಸಮಾಜದ ಸಂಸ್ಥಾಪಕರಾದ ಪ್ರೋತಾಪ್ ಚುಂದರ್ ಮೊಜೂಮ್ದಾರ್ ಮತ್ತು ನವೀನ ಚಂದ್ರ ರೈ ಅವರ ಭೇಟಿಗಳು ಅವರ ಪ್ರಯತ್ನಗಳನ್ನು ಹೆಚ್ಚಿಸಿವೆ. === ಹೆಣ್ಣುಮಕ್ಕಳ ಶಿಕ್ಷಣ === ೧೮೮೫ ರಲ್ಲಿ, ಭಂಡಾರ್ಕರ್ ಅವರು ಪ್ರಸಿದ್ಧ ಸಮಾಜ ಸುಧಾರಕರಾದ ವಾಮನ್ ಅಬಾಜಿ ಮೋದಕ್ ಮತ್ತು ನ್ಯಾಯಮೂರ್ತಿ ರಾನಡೆ ಅವರೊಂದಿಗೆ ಮಹಾರಾಷ್ಟ್ರ ಗರ್ಲ್ಸ್ ಎಜುಕೇಶನ್ ಸೊಸೈಟಿ (ಎಮ್‍ಜಿ‍ಇ) ಅನ್ನು ಸ್ಥಾಪಿಸಿದರು. ಸಮಾಜವು ಪುಣೆಯಲ್ಲಿ ಹುಜೂರ್ಪಗಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮೊದಲ ಸ್ಥಳೀಯ ಹೆಣ್ಣುಮಕ್ಕಳ ಪ್ರೌಢಶಾಲೆಯ ಪೋಷಕ ಸಂಸ್ಥೆಯಾಗಿದೆ. ಶಾಲಾ ಪಠ್ಯಕ್ರಮವು ಅದರ ಸ್ಥಾಪನೆಯಿಂದಲೇ ಇಂಗ್ಲಿಷ್ ಸಾಹಿತ್ಯ, ಅಂಕಗಣಿತ ಮತ್ತು ವಿಜ್ಞಾನದಂತಹ ವಿಷಯಗಳನ್ನು ಒಳಗೊಂಡಿತ್ತು. ಶಾಲೆಯ ಸ್ಥಾಪನೆ ಮತ್ತು ಅದರ ಪಠ್ಯಕ್ರಮವನ್ನು ರಾಷ್ಟ್ರೀಯವಾದಿ ನಾಯಕ ಲೋಕಮಾನ್ಯ ತಿಲಕ್ ಅವರು ತಮ್ಮ ಪತ್ರಿಕೆಗಳಾದ ಮಹ್ರಟ್ಟ ಮತ್ತು ಕೇಸರಿಯಲ್ಲಿ ತೀವ್ರವಾಗಿ ವಿರೋಧಿಸಿದರು. == ಆಯ್ದ ಕೃತಿಗಳು == , . . (1913). Vaiṣṇavism, Śaivism . - , 3.6. : Trübner. == ಪರಂಪರೆ == ಪುಣೆಯಲ್ಲಿರುವ ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್‍ಗೆ ಅವರ ಹೆಸರನ್ನು ಇಡಲಾಗಿದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅವನ ಜೀವನದಲ್ಲಿ ನಡೆದ ಘಟನೆಗಳ ಕಾಲಗಣನೆ - (ಮುರಿದ ಕೊಂಡಿ)